ಅದ್ಯಕೋ ಏನೋ ಅಂದೊಂದು ರಾತ್ರಿ, ಆಕಾಶದಲಿ ಒಂದು ಚುಕ್ಕಿ ಕಂಡಿತು, ಬಲು ಅಪರೂಪದ ಚುಕ್ಕಿ ಇಂದೆಂದೂ ಕಾಣಿಸದ ಚುಕ್ಕಿ
ತಣ್ಣಗಿದ್ದ ಮನಸ್ಸಿಗೆ ಕಟ್ಟಿತು ಬಣ್ಣದ ಕನಸ, ಎದೆಯೊಳಗರಳಿತೊಂದು ಪ್ರೀತಿಯ ಹೂವು, ನೋಡು ನೋಡುತ್ತಿದ್ದಂತೆಯೇ ಚಂದ್ರನಗಿಂತಲೂ ದೊಡ್ಡದಾಗಿ ಆವರಿಸಿತು, ಎಲ್ಲವನ್ನು ಮರೆಸಿತ್ತು. ಕಣ್ಣು ಮುಚ್ಚಿದರೂ ಅದೇ ಚುಕ್ಕಿ ಕಣ್ಣು ತೆಗೆದರು ಅದೇ ಚುಕ್ಕಿ ಬಣ್ಣದ ಕನಸುಗಳ ಬುತ್ತಿಗಳನ್ನು ಕಟ್ಟಿ ಮೈ ಬೆಚ್ಚಗೆ ಮಾಡಿತ್ತು, ಬದುಕಿಸಿತ್ತು.
ಒಮ್ಮೊಮ್ಮೆ ಯಂತೂ ಮಿತಿ ಮೀರಿತ್ತು ಅದರ ವ್ಯಾಮೋಹ ಸೂಪರ್ನೊವಾದಂತೆ ಹಗಲಿನಲ್ಲೂ ಕಾಣಿಸಿಕೊಂಡು ರಮಿಸಿಕೊಳ್ಳುತ್ತಿತ್ತು ಲಕ್ಷಾಂತರ ಚುಕ್ಕಿಗಳಿದ್ದರೂ, ಅದೊಂದು ಚುಕ್ಕಿ ಮಾತ್ರ ದಿನಾ ಎದೆಯುಲ್ಲೊಂದು ಹಾಡು ಮೂಡಿಸಿತ್ತು, ಕುಣಿಸುತ್ತಿತ್ತು
ರಾತ್ರಿ ಹಗಲೆನ್ನದೆ ಕಾಡುತ್ತಿದ್ದ ಆ ಚುಕ್ಕಿ ಒಂದು ದಿನ ಮಾಯವಾಯಿತು. ಆ ಚುಕ್ಕಿಯ ಸುಳಿವೇ ಇರಲಿಲ್ಲಾ, ಉಸಿರಾಡುವ ಗಾಳಿಯೇ ವಿಷವಾದಂತೆ ಸುಡು ಬಿಸಿಲ ದಿನಗಳೂ ಕಾರ್ಗತ್ತಲಾದಂತೆ ಸುತ್ತಲ ಹಸಿರೆಲ್ಲವನ್ನು ಯಾರೋ ಕಿತ್ತುಕೊಂಡಂತೆ ಎಲ್ಲವೂ ಶೂನ್ಯವಾದಂತೆ, ಅನಂತ ಮೌನ ಆವರಿಸಿತು
ಸಿಕ್ಕ ಸಿಕ್ಕವರನ್ನೆಲ್ಲಾ ಕೆಳಿದೆ, ಅಲ್ಲೊಂದು ಸುಂದರ ಚುಕ್ಕಿ ಇತ್ತಲ್ಲಾ ಎಲ್ಲಿ ಎಂದು? ಎಲ್ಲರೂ ನಕ್ಕಿ ಸುಮ್ಮನಾಗುತ್ತಿದ್ದರು ಎದೆಯೊಳಗೆ ಮೂಡುತ್ತಿದ್ದ ಗಾಯ ಮಾತ್ರ ದಿನೇ ದಿನೇ ಹೆಚ್ಚಾಗುತ್ತಲೇ ಇತ್ತು, ಮಡುಗಟ್ಟಿತ್ತು
ಎಲ್ಲಾ ನಕ್ಷತ್ರ ಪುಂಜಗಳಲ್ಲಿ ನಿಹಾರಿಕೆಗಳಲ್ಲಿ, ಬಿಟ್ಟು ಬಿಡದೆ ಪ್ರತಿ ರಾತ್ರಿಯು ಆ ಚುಕ್ಕಿಯನ್ನು ಹುಡುಕುತ್ತಿರುವೆ, ಸಹಸ್ರ ವರುಷಗಳಿಂದ ಬೆಳಗುತ್ತಿರುವ ನಕ್ಷತ್ರ ರಾಶಿಗಳಲ್ಲಿ, ಜೀವ ಸಲೆ ತುಂಬಿದ ಆ ಒಂದು ಬೆಳಕಿಗಾಗಿ, ಕನಸಿಗಾಗಿ, ಪ್ರೀತಿಗಾಗಿ ಒಲವು ಕನವರಿಸುತ್ತಲೇ ಇದೆ…
ಮನೆಯ ತಾರಸಿ ಮೇಲೆ ಇರುವ ದೂರದರ್ಶಕ ಆಕಾಶಕ್ಕೆ ಮುಖ ಮಾಡಿ ಗಾಳಿ, ಮಳೆ, ಚಳಿಯನ್ನದೇ ಇನ್ನೂ ಆ ಚುಕ್ಕಿಯನ್ನು ಹುಡುಕುತ್ತಲೇ ಇದೆ…
ಕಣ್ಣಂಚಿನ ಹನಿಯು ಹೇಳುತಿದೆ ನಾ ನಿನ್ನ ಕಂಡೆ ಎಂದು ತುಟಿಯಂಚಿನ ನಗುವು ಹೇಳುತಿದೆ ನಾ ನಿನ್ನ ಬಲ್ಲೆ ಎಂದು ರಾತ್ರಿಯ ಕನಸೆಲ್ಲವೂ ಹೇಳುತಿದೆ ನೀ ನನ್ನ ಕನಸು ಎಂದು ಪ್ರತಿ ಹೃದಯದ ಬಡಿತ ಹೇಳುತಿದೆ ನೀ ನನ್ನ ಜೀವ ಎಂದು ನನ್ನ ಪ್ರೀತಿಯ ಮನಸ್ಸು ಕೂಗಿ ಕೂಗಿ ಹೇಳುತಿದೆ ಇಲ್ಲಿ ಯಾರು ಇಲ್ಲ ಎಂದು
ಆ ಎರಡು ಸಾಲುಗಳು ಎಷ್ಟು ನೆನೆದರು ನೆನಪಿಗೆ ಬರುತ್ತಿಲ್ಲ ಯಾರು ಎಲ್ಲಿಗೆ ಕರೆದೊದರೊ? ಎಲ್ಲಿ ಕಷ್ಟಗಳುನುಭವಿಸುತ್ತಿವೆಯೋ? ಯಾವ ಧುರುಳರಡಿಯಲಿ ಸಿಲುಕಿ ನರಳುತ್ತಿವೆಯೋ?
ಕರೆದೊದರೊ, ಕದ್ದೊದರೋ, ಒದ್ದೋದರೋ, ತುಳಿದೊದರೊ, ಗೊತ್ತಿಲ್ಲ. ಆ ಸಾಲುಗಳ ಕಣ್ಮರೆಗೆ ಅಲ್ಲಿರುವ ದೊರೆಯೇ, ಅವನ ಭಕ್ತರೇ ಕಾರಣ ಎಂಬ ಆ ಹುಚ್ಚನ ಪಠಣ ಯಾರು ಕೇಳಿಯಾರು? ಎಲ್ಲರೂ ಹುಚ್ಚರಾಗುವ ಬದಲು ಭಕ್ತರಾಗುತ್ತಿರುವುದನ್ನ ಸಾರಿ ಸಾರಿ ಹೇಳಿದ ಅಲ್ಲಿದ್ದ ಯೋಗಿಯೊಬ್ಬ…
ಹೀಗಿರುವಾಗ, ಅಲ್ಲೆಲ್ಲೋ…. ಹುಣ್ಣಿಮೆ ಬೆಳಕ ಮರೆಯಲ್ಲಿ ನಿಂತ ಪ್ರೀತಿ ಅತ್ತಿತ್ತ ನೋಡುತ್ತಾ, ಕಣ್ಣು ಮಿಟಿಕಿಸುತ್ತ, ಎಲ್ಲರ ಕಣ್ತಪ್ಪಿಸಿ, ಆ ಎರಡು ಸಾಲುಗಳ ಹುಡುಕುತ್ತಿತ್ತು.
ರವಿ ಇಳಿದ ದಿಕ್ಕಿನಲ್ಲಿ, ಬೆಳ್ಳಿ ಮೂಡಿಹನು ಸಲ್ಫರ್ ಗಳ ಮೋಡ ಹಿಡಿದಿರುವ ಶುಕ್ರ; ಪಡುವಣದಿಕ್ಕಿನಿಂದ ಬೆಳ್ಳಿಯ ನಂತರ ಅನಿಲ ಮೋಡಗಳ ಧೈತ್ಯನಾದ ಗುರು ದರ್ಶನ; ನೆತ್ತಿಯ ಆಸು ಪಾಸಲ್ಲೇ, ಹಳದಿ-ಕೆಂಪು ಮಿಶ್ರಿತ ಮಂಗಳನ ಅಂಗಳ ಗೋಚರ; ತನ್ನ ಬಳೆಯ ವಾರೆ ನೋಟದಲ್ಲೇ ಮನ ಗೆದ್ದಿರುವ ಶನಿ, ಈಗ ಮಂಗಳನ ಹಿಂಬಾಲಿಕ
ದಿನ ಪೂರ್ತಿ ದಣಿದ ದೇಹಕ್ಕೆ ಇಳೆಯ ಬೆಳಕೇ ಮಾಸಿದ ಅಕ್ಷಿಗೆ ಅಸಂಖ್ಯಾತ ವರ್ಷಗಳಿಂದ ಚಲಿಸಿರುವ ಕಿರಣಗಳ ದರ್ಶಿಸಿ ಜಗದೊಳಗೊಂದಾಗಿರಿ
ಸಾಮಾಜಿಕ ಮಾಧ್ಯಮಗಳಲ್ಲಿ ಆಗಸದಲ್ಲಿ ಬಣ್ಣದ ಬೆಳಕು ಮೂಡಿರುವ Aurora* (ಅರೋರಾ) ಚಿತ್ರಗಳನ್ನು ನೀವು ನೋಡಿರಬಹುದು. ಆಗಸದಲ್ಲಿ ವಿವಿಧ ಬಣ್ಣಗಳ ಬೆಳಕಿನ ಚಿತ್ತಾರಗಳನ್ನು ಬಿಡಿಸಿ ನಮ್ಮನ್ನು ಕಲ್ಪನಾ ಲೋಕಕ್ಕೆ ತೆರಳಿದಂತೆ ಅನುಭವ ನೀಡುವ ಈ ಅರೋರಾ ಭೂಮಿಯಿಂದ ನಾವು ನೋಡಬಹುದಾದ ಮಂತ್ರ ಮುಗ್ದಗೊಳಿಸುವ ಒಂದು ಸುಂದರ ಖಗೋಳ ವಿದ್ಯಮಾನ! ಹೆಚ್ಚಾಗಿ ಉತ್ತರ / ದಕ್ಷಿಣ ಧೃವ ಪ್ರದೇಶಕ್ಕೆ ಮಾತ್ರ ಸೀಮಿತವಿದ್ದ ಅರೋರಾ ಈ ಬಾರಿ ಉತ್ತರ ಧೃವದಿಂದ ದೂರವಿರುವ ಭಾರತದ ಲಡಾಕ್ ಪ್ರದೇಶದಿಂದಲೂ ಕಂಡಿರುವುದು ಒಂದು ಅಚ್ಚರಿಯೇ ಸರಿ.
ಅರೋರಾ ಅನ್ನು ಸಾಮಾನ್ಯವಾಗಿ Northern Lights and Southern Lights ಎಂದು ಕರೆಯುತ್ತಾರೆ. ಕನ್ನಡದಲ್ಲಿ ಉತ್ತರ ಧೃವದ ಬೆಳಕು ಮತ್ತು ದಕ್ಷಿಣ ಧೃವದ ಬೆಳಕು ಎಂದು ಕರೆಯಬಹುದು. ಉತ್ತರದ ಪ್ರದೇಶಗಳಲ್ಲಿ ಕಾಣುವ ಅರೋರಾ ವನ್ನು Aurora Borialis ಮತ್ತು ದಕ್ಷಿಣ ಧೃವದ ಪ್ರದೇಶದಲ್ಲಿ Aurora Australis ಎಂದು ಕರೆಯುತ್ತಾರೆ.
ಅರೋರ ಒಂದು ಖಗೋಳ ವಿದ್ಯಮಾನವಾದರೂ, ಧೃವ ಪ್ರದೇಶದ ರಾತ್ರಿಯ ಆಗಸದಲ್ಲಿ ರಂಗು ರಂಗಿನ ಬಣ್ಣದ ಬೆಳಕಿನ ಅರೊರಾ ಮೂಡುವುದು ಭೂಮಿಯ ವಾತವರಣದಲ್ಲಿಯೇ. ಆದರೇ, ಆರೋರಾ ಮೂಡುವುದಕ್ಕೆ ಕಾರಣ ಮಾತ್ರ ಸೂರ್ಯ! ಸೂರ್ಯ ಒಂದು ನಕ್ಷತ್ರ. ಸೂರ್ಯನು ತನ್ನೊಳಗೆ ನಡೆಯುವ ಪರಮಾಣು ಸಮ್ಮಿಳನ ಕ್ರಿಯೆಯಿಂದ (Nuclear Fusion Reaction) ಅತೀ ಹೆಚ್ಚು ಶಕ್ತಿಯನ್ನು (Energy) ಸೃಷ್ಟಿಸಿ, ಸೂರ್ಯ ಬೆಂಕಿಯ ಚೆಂಡಿನಂತೆ ಹೊಳೆಯುತ್ತದೆ. ಸೂರ್ಯದಿಂದ ಬರುವ ಬೆಳಕಿನ ಶಕ್ತಿಯೇ, ಭೂಮಿಯ ಜೀವ ರಾಶಿಯ ಮೂಲ. ಇಂತ ಸೂರ್ಯ, ಅಗ್ಗಿಂದ್ದಾಗೆ ಯಾವುದೇ ಮನ್ಸೂಚನೆ ಇಲ್ಲದೆ, ಸೌರ ಅಲೆಗಳು, ಸೌರ ಚಂಡ ಮಾರುತಗಳು ಮತ್ತು ಹೆಚ್ಚು ಶಕ್ತಿಯುಳ್ಳ ವಿದ್ಯುದಾವೇಶ ಕಣಗಳ ಮೋಡಗಳನ್ನು ಹೊರೆಗೆ ಬಿಸಾಡುತ್ತದೆ. ಇತರಹದ ಸೌರ ಮಾರುತಗಳು, ವಿದ್ಯುದಾವೇಶದ ಕಣಗಳ ಮೊಡಗಳು ಸಾವಿರಾರು ಕಿಲೋ ಮೀಟರ್ಗಳಷ್ಟು ದೊಡ್ಡದಾಗಿದ್ದು, ಲಕ್ಷಾಂತರ ಕಿಲೋ ಮೀಟರ್ ಚಲಿಸಿ, ಭೂಮಿಗೆ ಅಪ್ಪಳಿಸುತ್ತವೆ.
ಇಂತಹಾ ಕಣಗಳ ಮೋಡಗಳು ಹೆಚ್ಚಿನವು ಬಾಹ್ಯಾಕಾಶದಲ್ಲಿ ವಿವಿಧ ದಿಕ್ಕಿನಲ್ಲಿ ಚಲಿಸಿದರೂ, ಸೂರ್ಯನಿಂದ ಭೂಮಿ ಇರುವ ದಿಕ್ಕಿಗೆ ಬರುವ ಕಣಗಳ ಮೋಡುಗಳು ಭೂಮಿಗೆ ಅಪ್ಪಳಿಸುತ್ತವೆ. ಈಗೆ ಅಪ್ಪಳಿಸುವ ಶಕ್ತಿಯುತ ಕಣಗಳು ವಿದ್ಯುದಾವೇಶ (Electrically Charged Particles) ಹೊಂದಿರುವುದರಿಂದ, ಭೂಮಿಯ ಕಾಂತೀಯ ಕ್ಷೇತ್ರವು (Earth’s Magnetic Field) ಈ ಶಕ್ತಿಯುತ ಕಣಗಳನ್ನು ಭೂಮಿಯ ಧೃವ ಪ್ರದೇಶಗಳಿಗೆ ನೂಕುತ್ತದೆ. ಭೂಮಿಯ ಧೃವ ಪ್ರದೇಶದಲ್ಲಿ ಈ ಕಣಗಳು ವಾತವರಣದ ಅಯಾನುಗೋಳದಲ್ಲಿನ (Ionspere) ಅನಿಲಗಳ ಕಣಗಳ ಜೊತೆಗೆ ಡಿಕ್ಕಿ ಹೊಡೆದು, ಅನಿಲಗಳ ಕಣಗಳನ್ನು ಕಾಯಿಸುತ್ತದೆ. ಇದನ್ನು ವೈಜ್ಞಾನಿಕವಾಗಿ excitation process (ಪ್ರಚೋದನೆ) ಎಂದು ಕರೆಯುತ್ತೇವೆ. ಈ ಅರೋರಾ, ಭೂಮಿಯ ವಾತವರಣದಲ್ಲಿರುವ ವಿವಿಧ ಅನಿಲಗಳ ಕಣಗಳಿಗೆ ಸೂರ್ಯನಿಂದ ಬಂದಿರುವ ಶಕ್ತಿಯುತ ಕಣಗಳು ಡಿಕ್ಕಿ ಹೊಡೆದು, ಕಾಯಿಸಿ, ಬೆಳಕು ಹೊರಸೂಸುವ ಕ್ರಿಯೆಯಾಗಿದೆ. ಭೂಮಿಯ ಕಾಂತೀಯ ಕ್ಷೇತ್ರ ಸೂರ್ಯನಿಂದ ಬರುವ ಶಕ್ತಿಯುತ ಕಣಗಳನ್ನು ಧೃವ ಪ್ರದೇಶಗಳಿಗೆ ನೂಕುವುದರಿಂದ, ಅರೋರವನ್ನು ನಾವು ಧೃವ ಪ್ರದೇಶಗಳಲ್ಲಿ ಮಾತ್ರ ಕಾಣಬಹುದು. ಈ ಅರೋರಾದ ಬೆಳಕು ತರಂಗದ ಮಾದರಿಯಲ್ಲಿ ರಾತ್ರಿ ಆಕಾಶದಲ್ಲಿ ಮೂಡುವುದಾಗಿದ್ದು, ಭೂಮಿಯ ಕಾಂತೀಯ ಕ್ಷೇತ್ರದ ರೇಖೆಗಳಿಂದಾಗಿ ಇಂತಹಾ ತರಂಗದ ಮಾದರಿಯ ಅರೋರಾಗಳು ಉಂಟಾಗುತ್ತವೆ.
ಅರೋರಾದ ಬೆಳಕು ಹೇಗೆ ಮೂಡುತ್ತದೆ ಎಂದು ಅರ್ಥ ಮಾಡಿಕೊಂಡೆವು. ಆದರೆ, ಅರೋರದ ರಂಗು ರಂಗಿನ ಬಣ್ಣ ಎಲ್ಲಿಂದ ಬಂದಿತು? ಇದಕ್ಕೆ ಕಾರಣ ಭೂಮಿಯ ವಾತವರಣದಲ್ಲಿರುವ ಅನಿಲಗಳು. ವಿವಿಧ ಅನಿಲಗಳಿಗೆ ಶಾಖ ನೀಡಿದಾಗ, ಅವು ವಿವಿಧ ಬಣ್ಣದ ಬೆಳಕನ್ನು ಹೊರ ಹಾಕುತ್ತದೆ. ಭೂಮಿಯ ವಾತವರಣದಲ್ಲಿ ಅತೀ ಹೆಚ್ಚು ಸಾರಜನಕ (Nitrogen) ಮತ್ತು ಆಮ್ಲಜನಕ (Oxygen) ಅನಿಲಗಳಿವೆ. ಅರೊರಾದಲ್ಲಿನ ಹಸಿರ ಬಣ್ಣ, ಆಮ್ಲಜನಕದ ಕಣಗಳ ಪ್ರಚೋದನೆಯಿಂದ ಬಂದರೆ, ನೀಲಿ ಮತ್ತು ಪಿಂಕ್ ಬಣ್ಣಗಳು ಸಾರಜನಕದ ಕಣಗಳ ಪ್ರಚೋದನೆಯಿಂದ ಉಂಟಾಗುತ್ತದೆ. ಇತರೆ ಅನಿಲ ಕಣಗಳ ಪ್ರಚೋದನೆಯಿಂದ ಬೇರೆ ಬೇರೆ ಬಣ್ಣಗಳನ್ನು ಸಹ ಕಾಣಬಹುದು. ಅರೋರಾ ಭೂಮಿಯಲ್ಲಲ್ಲದೆ, ಇತರೆ ಗ್ರಹಗಳಲ್ಲೂ ಕೂಡ ಕಾಣಬಹುದಾಗಿದ್ದು, ಖಗೋಳ ನೌಕೆಗಳು ಕೆಲವು ಗ್ರಹಗಳ ಅರೊರಾ ಚಿತ್ರಗಳನ್ನೂ ಸಹ ಸೆರೆ ಹಿಡಿದಿದೆ.
ಅರೊರಾವನ್ನು ಹೆಚ್ಚಾಗಿ ಧೃವ ಪ್ರದೇಶಗಳಿಂದ ಮಾತ್ರ ನೋಡಲು ಸಾದ್ಯ. ಸೌರ ಮಾರುತಗಳು, ಶಕ್ತಿಯುತ ಕಣಗಳ ಮೋಡಗಳು ಸೂರ್ಯನಿಂದ ಹೊರಹಾಕಲ್ಪಟ್ಟ ನಂತರದ ಎರಡು ದಿನಗಳಲ್ಲಿ ಭೂಮಿಯ ಧೃವ ಪ್ರದೇಶದಲ್ಲಿ ಅರೋರ ಚಟುವಟಿಕೆಯನ್ನು ಕಾಣಬಹುದಾಗಿದೆ. ಧೃವ ಪ್ರದೇಶದಿಂದ ದೂರವಿರುವ ಪ್ರದೇಶಗಳಿಗೆ ಈ ವಿದ್ಯಮಾನ ಅತ್ಯಂತ ವಿರಳವಾದದ್ದು. ಅದರಲ್ಲೂ ಭಾರತದಿಂದ ನೋಡುವುದು ಅಸಾಧ್ಯವಾದದ್ದು. ಆದರೇ, ಸೂರ್ಯನಲ್ಲಿ ನಡೆಯುವ ಪರಮಾಣು ಕ್ರಿಯೆಯು ಅತ್ಯಂತ ಬಲಾಢ್ಯವಾದದ್ದು. ಸೂರ್ಯನ ಮೇಲ್ಮಯಲ್ಲಿ ಸೌರ ಕಲೆಗಳು ಹೆಚ್ಚಾದಾಗ, ಸೂರ್ಯನಿಂದ ಅತೀ ಹೆಚ್ಚು ಸೌರ ಮಾರುತಗಳು, ಶಕ್ತಿಯುತ ಕಣಗಳು ಲಕ್ಷಾಂತರ ಕಿಲೋ ಮೀಟರ್ ಗಾತ್ರದಲ್ಲಿ ಸ್ಪೋಟಗೊಂಡು ಬಾಹ್ಯಾಕಾಶಲ್ಲಿ ಚಲಿಸಿ, ಭೂಮಿಗೆ ಅಪ್ಪಳಿಸಿದಾಗ. ಅರೊರಾಗಳನ್ನು ದೃವ ಪ್ರದೇಶದ ಹೊರತಾಗು ಇತರ ಪ್ರದೇಶಗಳಿಂದಲೂ ಸಹ ನೋಡಬಹುದಾಗಿದೆ. ಇದು, ಸೂರ್ಯನಲ್ಲಿ ನಡೆಯುವ ಅತ್ಯಂತ ವಿರಳವಾದ ಸನ್ನಿವೇಷವಾಗಿದ್ದರು, ಯಾವುದೇ ಮುನ್ಸೂಚನೆ ಇಲ್ಲದೆ ನಡೆಯುವ ಕ್ರಿಯೆಯಾಗಿದ್ದು, ಇನ್ನೂ ಹೆಚ್ಚು ಅಧ್ಯಯನ ಮಾಡುವ ಸಂಗತಿಯು ಆಗಿದೆ. ಮೇ ತಿಂಗಳಲ್ಲಿ ಇಂತಹ ವಿದ್ಯಾಮಾನ ಸೂರ್ಯನಲ್ಲಿ ಸಂಭವಿಸಿದ್ದು, ಧೃವ ಪ್ರದೇಶದಿಂದ ದೂರವಿರುವ ನಗರಗಳಾದ ನ್ಯೂಯಾರ್ಕ ಮತ್ತು ಲಂಡನ್ ನಿಂದಲೂ ಅರೋರಾವನ್ನು ಜನರು ತಮ್ಮ ಮನೆಯಿಂದಲೇ ನೋಡಿ ಸಂಭ್ರಮಿಸಿದ್ದಾರೆ, ಪೋಟೋ ಕ್ಲಿಕ್ಕಿಸಿದ್ದಾರೆ. ಭಾರತದ ಲಡಾಕ್ ಪ್ರದೇಶದಲ್ಲಿರುವ ಭಾರತೀಯ ಖಗೋಳ ವಿಜ್ಞಾನ ಸಂಸ್ಥೆಗೆ ಸೇರಿದ ಖಗೋಳ ವಿಕ್ಷಣಾಲಯದ ಕೆಮಾರಾವು ಈ ಅರೋರಾವನ್ನು ಸೆರೆ ಹಿಡಿದಿದೆ. ಮೆ ತಿಂಗಳಲ್ಲಿ ಅರೋರಾ ಚಟುವಟಿಕೆಗಳು ಹೆಚ್ಚಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲೂ ಸಹ ಅರೋರಾ ಫೋಟೋಗಳು ಜನರು ಹಂಚಿಕೊಳ್ಳುತ್ತಿದ್ದಾರೆ. ನೀವು ಭಾರತದ ಲಡಾಕ್ ಪ್ರದೇಶಕ್ಕೆ ಅಥವಾ ಯುರೋಪ್ ಮತ್ತು ಇತರೆ ಉತ್ತರ ಧೃವದ ದೇಶಗಳಿಗೆ ಹೊರಟಿದ್ದರೆ, ಅಂತರ್ಜಾಲದಲ್ಲಿ ಹವಾಮಾನ ಪರೀಕ್ಷಿಸಿದಂತೆ, ಅರೋರಾ ಅಲರ್ಟ್ಗಳನ್ನು ಒಮ್ಮೆ ಪರೀಕ್ಷಿಸಿ ಹೊರಡಿ. ತದನಂತರ ರಾತ್ರಿ ಆಕಾಶವನ್ನು ನೋಡಲು ಮರೆಯದಿರಿ.
ಅರೋರಾವನ್ನು ಬರೀ ಕಣ್ಣಿನಿಂದ ನೋಡಬಹುದು. ಆದರೆ, ಪೋಟೋದಲ್ಲಿ ಕಾಣುವಷ್ಟು ಪ್ರಕರವಾಗಿ ಬರೀ ಕಣ್ಣಿಗೆ ಕಾಣಿಸುವುದಿಲ್ಲ. ಅರೋರಾ ಪೋಟೋಗಳನ್ನು Long Exposure ನಲ್ಲಿ ಸೆರೆ ಹಿಡಿದಿರುತ್ತಾರೆ, ಹಾಗಾಗಿ ಪೋಟೋದಲ್ಲಿ ಹೆಚ್ಚು ಪ್ರಕರವಾಗಿ ಕಾಣುತ್ತದೆ. ಮಾನವನು ಬಹಳ ಹಿಂದಿನಿಂದಲೂ ಅರೋರಾವನ್ನು ನೋಡಿರುವುದನ್ನು ದಾಖಲಿಸಿದ್ದಾನೆ. ಸುಮಾರು 30 ಸಾವಿರ ವರ್ಷಗಳ ಹಿಂದೆ ಶೀಲಾಯುಗದ ಗುಹೆಯೊಳಗಿನ ಚತ್ರಗಳಲ್ಲಿ ಅರೋರಾವನ್ನು ದಾಖಲಿಸಿರುವುದನ್ನು ನಾವು ಕಾಣಬಹುದು. ಅರಿಸ್ಟಾಟಲ್ ಕೂಡ ಅರೊರಾವನ್ನು ತನ್ನ ಪುಸ್ತಕದಲ್ಲಿ ದಾಖಲಿಸುತ್ತಾನೆ. ರೋಮನ್ನ ಒಬ್ಬ ದೊರೆ ಸೀಸರ್, ಆಗಸದಲ್ಲಿ ತಾನು ಕಂಡ ಬಣ್ಣದ ಬೆಳಕನ್ನು, ಬೆಂಕಿಯ ಜ್ವಾಲೆ ಎಂದು ತಿಳಿದು, ಇಟಲಿಯ ಒಂದು ನಗರ ಹೊತ್ತಿ ಉರಿಯುತ್ತಿರಬಹುದೆಂದು ಭಾವಿಸಿ, ತನ್ನ ಜನಗಳನ್ನು ಅಲ್ಲಿಗೆ ಕಳುಹಿಸುತ್ತಾನೆ. ಆದರೆ, ಅದು ಬಣ್ಣದ ಬೆಳಕಿನ ಅರೋರಾವಾಗಿರುತ್ತದೆ. ಅರೋರಾ ಎಂಬ ಪದವನ್ನು ಮೊದಲಬಾರಿಗೆ ಪ್ರಯೋಗಿಸಿದ್ದು, ಗೆಲಿಲಿಯೋ ಗೆಲಿಲಿ. Aurora Boreas ಎಂಬುದು ಗ್ರೀಕ್ ಪದ, aurora ಎಂದರೆ sunrise ಎಂದರ್ಧ. Boreas ಎಂದರೆ wind ಎಂದರ್ಧ. ಗ್ರೀಕರು Aurora ಅನ್ನು Helios ಮತ್ತು Selene ಯ ತಂಗಿ ಎಂದು ತಿಳಿದಿದ್ದರು. Helios ಎಂದರೆ ಸೂರ್ಯ, Selene ಎಂದರೆ ಚಂದ್ರ.
ಈಗ ಬೇಂದ್ರಯ ಹಾಡನ್ನು ಅರೋರಾಗೆ ಹೀಗೆ ಬರೆಯಬಹುದೇನೋ “ಮುಗಿಲ ಮಾರಿಗೆ ರಾಗರತೀಯ ರಂಗು ಏರಿತ್ತಾ… ಆಗ ಅರೋರಾ ಕಂಡಿತ್ತಾ. ಇರುಳ ಹರಳಿನ ಧೃವದ ಕಡೆಗೆ ಚುಕ್ಕಿ ಹತ್ತಿತ್ತಾ… ಜೊತೆಗೆ ಬಣ್ಣವು ಏರಿತ್ತಾ. ಆಗ ಅರೋರಾ ಕಂಡಿತ್ತಾ…
*Auroraಗೆ ಕನ್ನಡ ಪದ ಸುಸಿಲು, ಮುಂಬೆಳಕು ಎಂಬುದಾಗಿಯೂ ಇದೆ.
ಅವನು ಗಡಿಗೆ ಹೊರಟನು; ಇವಳು ಗುಡಿಗೆ ಹೋದಳು. ಅವನು ದೇಶಕ್ಕಾಗಿ ಪ್ರಾಣ ನೀಡಲು ಹೊರಟನು; ಇವಳು ದೇಶಕ್ಕಾಗಿ ಶಾಂತಿ ಜಪಿಸಲು ಹೋದಳು. ಅವನು ರಾತ್ರಿ ಹಗಲೆನ್ನದೆ ಗಡಿ ಕಾಯಲು ಪಣತೊಟ್ಟನು; ಇವಳು ಗುಡಿಯಿಂದ ಮನೆಗೆ ಬಂದಳು.
ಅವನಿದ್ದ ಗಡಿಯಿಂದ ಬಂತು, ವೀರ ಮರಣದ ಸುದ್ದಿ; ಸುದ್ದಿ ಕೇಳಲಾಗದೆ ಇವಳು ಮತ್ತೊಮ್ಮೆ ಗುಡಿಗೆ ಹೋದಳು. ಗುಡಿಯ ದೇವರ ಕಣ್ಣಲ್ಲಿ ನೀರು ಜಿನುಗಿತ್ತು; ಕೇಳಿದಳು, ಏಕೆ ನನ್ನ ಶಾಂತಿಯ ಜಪ ಮನ್ನಿಸಿದೆ?
ಅದಕ್ಕೆ, ದೇವರು ಗದ್ಗದಿಸಿದನು; ಗಡಿಯ ಸೃಷ್ಟಿ ನಾನಲ್ಲ, ನೋಡಲಾರೆ ನನ್ನ ಮಕ್ಕಳ “ಸಾವನ್ನು”, ಹೀಗೆ. ಈಗ ನಾನು ನಿನ್ನಷ್ಟೇ ದುಃಖಿತನು; ಹುಡುಕುತ್ತಿರುವೆ, ಇದೇಕ್ಕೆಲ್ಲ ಕಾರಣರಾರೆಂದು?
ಲೋಕ ಸೃಷ್ಟಿ ಕರ್ತನ ಆ ಮಾತು ಕೇಳಿ ನಕ್ಕಳು. ದೇವರಿಗೆ ದುಃಖ ಇನ್ನಷ್ಟು ಉಮ್ಮಳಿಸಿ ಬಂತು; ಅಷ್ಟರಲ್ಲಿ- ವೀರ ಮರಣವ ಸಾವೆಂದವನನ್ನು ಕೊಲ್ಲಲು; ಬರುತ್ತಿರುವ ಭಕ್ತರನ್ನು ಕಂಡಳು; ದೇವರನ್ನು ಉಳಿಸಲು; ಇವಳೇ ಗಡಿಯ (ಗುಡಿಯ) ಕಾದಳು, ಮತ್ತೊಮ್ಮೆ, ಶಾಂತಿ ಮಂತ್ರವ ಜಪಿಸಿದಳು…
ಅವಳ ಮನೆಯಲ್ಲಿ, ಗಡಿಯಿಂದ ಬಂದಿದ್ದ, ಬಾವುಟ ಸುತ್ತಿದ ಅವನ ಕಳೆಬರಹ ಇವಳಿಗಾಗಿ ಕಾದಿತ್ತು.